
ಶಿವಮೊಗ್ಗ ಕರ್ನಾಟಕದ ದಕ್ಷಿಣ ಭಾಗ, ವಿಶೇಷವಾಗಿ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಪರಿವಾರದ ಇತರ ಅಂಗಸಂಸ್ಥೆಗಳ (ಬಿಜೆಪಿ, ಎಬಿವಿಪಿ, ವಿಶ್ವ ಹಿಂದೂ ಪರಿಷತ್ತು ಮೊದಲಾದವು) ಬೆಳವಣಿಗೆಯಲ್ಲಿ ಹಾಗೂ ಅವುಗಳನ್ನು ಬಲಪಡಿಸುವಲ್ಲಿ ಕೀರ್ತಿಶೇಷ ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಪಾತ್ರ ಗಮನಾರ್ಹ. ಸಂಘದ ವಿಭಾಗ ಕಾರ್ಯವಾಹರಾಗಿ ನಿರಂತರ ಪ್ರವಾಸ, ವೈಯಕ್ತಿಕ ಸಂಪರ್ಕ ಹಾಗೂ ತಮ್ಮ ಸ್ನೇಹಮಯಿ ಸಂಬಂಧಗಳಿಂದಾಗಿ ಪರಿವಾರವನ್ನು ಸಮಗ್ರ ಶಕ್ತಿಯುತವಾಗಿ ನಿರ್ಮಿಸಿದ ಕೀರ್ತಿ, ಕೀರ್ತಿಶೇಷರಾದ ಶ್ರೀ ಹಿರಿಯೂರು ಕೃಷ್ಣಮೂರ್ತಿಗಳದ್ದು.
ಮೂಲತಃ ಹಿರಿಯೂರಿನವರಾದಶ್ರೀ ಕೃಷ್ಣಮೂರ್ತಿಗಳು ಎಂ. ವಿಶ್ವೇಶ್ವರಯ್ಯನವರ ಮೋಕ್ಷಗುಂಡಂ ವಂಶದವರು. 1970ರ ಆಸುಪಾಸಿನಲ್ಲಿ ಶಿವಮೊಗ್ಗಕ್ಕೆ ಬಂದು ನೆಲೆಸಿದರು. ಎಂಎಸ್ಸಿ ಸ್ನಾತಕೋತ್ತರ ಪದವಿ ಗಳಿಸಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರಾದರು. ಜೊತೆ-
ಗೆ ಸಂಘ ಹಾಗೂ ಪರಿವಾರದ ಎಲ್ಲಾ ಕಾರ್ಯಕರ್ತರಿಗೆ ‘ಮೇಷ್ಟ್ರು’ ಎಂದೇ ಚಿರಪರಿಚಿತರಾದರು. ಪ್ರತಿಯೊಬ್ಬ ಕಾರ್ಯಕರ್ತರಿಗೂ ಆತ್ಮೀಯರಾದರು. ನಗುವಿನ ಹರಟೆಯೊಂದಿಗೆ ಪ್ರತಿಯೊಬ್ಬನನ್ನೂ ತಿದ್ದಿ-ತೀಡಿ
ಬೆಳೆಸಿದರು.
1975ರ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅವರ ಸಂಘಟನಾ ಚಟುವಟಿಕೆಗೆ ಒಂದು ಸವಾಲಾಗಿ ಬಂದಿತು. ತೆರೆಮರೆಯಲ್ಲಿ ಇದ್ದುಕೊಂಡೇ ಸರ್ವಾಧಿಕಾರದ ವಿರುದ್ಧ ಚಳುವಳಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಇವರ ಮನೆಯೇ ತಂತ್ರಗಾರಿಕೆಯ ಕಾರ್ಯಸ್ಥಾನವಾಯಿತು.
ಕಾರ್ಯಕರ್ತರಿಗೆ ನೆಲೆಯಾಯಿತು. ಹೊರಟಗಾರರ
ಮನೆಯಾಯಿತು. ಈ ಹೋರಾಟದಲ್ಲಿ ಪ್ರೇರಣಶಕ್ತಿಯಾಗಿ, ಕಾಣದ ಕೈಯಾಗಿ ದುಡಿದ ಶ್ರೀಕೃಷ್ಣಮೂರ್ತಿಗಳ ಸಂಘಟನಾ ಚತುರತೆಗೆ ಹೊಸ ಮೆರುಗು ನೀಡಿತು. ಅವರದು ನೀತಿ ಬೋಧನೆಯ ಪಾಠದ ಮಾರ್ಗವಾಗಿರದೆ,
ಮಿತ್ರತ್ವದ ಸವಿಯ ಸಹಚರ್ಯದ ದಾರಿಯಾಗಿತ್ತು. ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆಯಿಂದ ಬರಸೆಳೆದು ಮಾತನಾಡುವ ಮಾತಿನಲ್ಲಿ ಸದಾ ಹಾಸ್ಯ ಚಟಾಕಿ ನಡೆಸುವ ಅವರ ಗೆಳೆತನದ ಪರಿ ಅನನ್ಯ. ‘ಮಿತ್ರಸಮಿತೆ’ಗೊಂದು ಅದ್ಭುತ ಉದಾಹರಣೆ ನಮ್ಮ ಮೇಷ್ಟ್ರು. ನಿರಂತರ ಪ್ರವಾಸದ ಮೂಲಕ, ಹಲವು ಜಿಲ್ಲೆಗಳಲ್ಲಿ ಸಾವಿರಾರು ಕಾರ್ಯಕರ್ತರಿಗೆ ಸ್ವಯಂಸೇವಕರಿಗೆ ಸಮೀಪ ಬಂಧುವಾದರು. ನೂರಾರು ಮನೆಗಳಿಗೆ ವಾರಕ್ಕೊಮ್ಮೆಯಾದರೂ ಭೇಟಿ ನೀಡಿ, ಅನೌಪಚಾರಿಕವಾಗಿ ಹರಟುವ, ಅವರ ಮನೆ-ಮನ ಗೆಲ್ಲುವ ಪರಿ ಅಸಾಧಾರಣ.
ಪ್ರತಿಯೊಬ್ಬರಿಗೂ ಮೇಷ್ಟ್ರು ನನಗೆ ಸ್ವಲ್ಪ ಹೆಚ್ಚು ಹತ್ತಿರ ಎನ್ನುವ ಭಾವನೆ ಬರಿಸುವ ಅವರ ಒಡನಾಟದ ಪರಿ ಒಂದು ಸೋಜಿಗವೇ ಸರಿ.
ಔಪಚಾರಿಕ, ಕೃತಕ ಸಂಬಂಧವೇ ಇರುವಾಗಲೂ ಅದರಲ್ಲಿಯೂ ಜೀವಂತಿಕೆಯ ಗೆಳೆತನ ಬೆಸೆಯುವಲ್ಲಿ ಮೇಷ್ಟಿಗೆ ಅವರೇ ಸಾಟಿ. ಮನೆಯ ಸದಸ್ಯರಾಗ ಬೆಸೆದುಕೊಳ್ಳುವ ಜೊತೆಗೆ, ಆ ಮನೆಯ ಸೂಕ್ಷ್ಮತೆ ಅರಿತು, ಅವರಿಗೆ ಗೊತ್ತಿಲ್ಲದಂತೆ ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಎಂದೇ ಮೇಷ್ಟ್ರು ಸಂಘಟನೆ ಬೆಳೆಸುವ ಜೊತೆಗೆ ನೂರಾರು ಕುಟುಂಬಗಳಿಗೂ ಪೋಷಕರಾದರು.
ಸಂಘದ ಕಾರ್ಯಕ್ರಮಗಳು, ಶಿಬಿರಗಳು, ಬಿಜೆಪಿಯ ಚುನಾವಣಾ ರಣತಂತ್ರ, ಹಿಂದು ಸಮಾಜೋತ್ಸವಗಳು, ವಿದ್ಯಾರ್ಥಿ ಚಳುವಳಿ, ಕಾರ್ಮಿಕರ ಹೋರಾಟ ಹೀಗೆ ಈ ಎಲ್ಲಾ ಬಗೆಯ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳ ಮಾರ್ಗದರ್ಶಿ ಯಾಗಿದ್ದರು. ಬೈಠಕ್ಗಳಲ್ಲಿ ಸಹಜವಾಗಿ ಮಾತನಾಡುವ ಅವರ ವಿಧಾನ ಇಂದು ಅಪರೂಪ ಎನ್ನಿಸುವಷ್ಟು ಮಟ್ಟಿಗೆ ವಿಶೇಷವಾಗಿತ್ತು.
‘ವಜ್ರಾದಪಿ ಕಠೋರಾಣಿ ಮೃದೂನೀ ಕುಸುಮಾದಸಿ’ ವಜ್ರದಂತೆ ಕಠಿಣ, ಹೂವಿನಂತೆ ಮೃದು – ಇದು ಅವರಿಗೆ ಅವರಒಡನಾಟಕ್ಕೆ ಅನ್ವರ್ಥವಾಗಿತ್ತು.ನಿಷ್ಟುರವಾಗಿಹೇಳುವ, ಬೈದು ಗದರಿಸುವ ಸಲುಗೆ ಹೊಂದಿದ್ದ ಮೇಷ್ಟ್ರು, ತಮ್ಮ ಈ
ಆಕರ್ಷಕ ನಡೆಯಿಂದಾಗಿ ನೂರಾರು ಕಾರ್ಯಕರ್ತರನ್ನು ಬೆಳೆಸಿದರು. ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ,
ಡಿ.ಹೆಚ್. ಶಂಕರಮೂರ್ತಿ, ಎಂ. ಆನಂದರಾವ್, ಆರ್.ಕೆ. ಸಿದ್ದರಾಮಣ್ಣ, ಎಂ.ಬಿ. ಭಾನುಪ್ರಕಾಶ್, ಆಯನೂರು ಮಂಜುನಾಥ್, ಗಿರೀಶ್ ಪಟೇಲ್, ಎ.ಜೆ. ರಾಮಚಂದ್ರ, ಗೋಪಾಲಕೃಷ್ಣ ಭಾಗವತ್, ಮೈಲಾರಿ ಮೊದಲಾದ ಅಸಂಖ್ಯ ಕಾರ್ಯಕರ್ತರನ್ನು ಕಟೆದು ನಿಲ್ಲಿಸಿದ ಶಿಲ್ಪಿ ಕೃಷ್ಣಮೂರ್ತಿಗಳು.
ಶಿವಮೊಗ್ಗದಲ್ಲಿ ಸಂಘದ ಕಾರ್ಯಾಲಯ “ಮಧುಕೃಪ’ದ ರೂವಾರಿಯೂ ಇವರೇ.
ಮಾಧವ ನೆಲೆ, ಕೇಶವ ಚಿಕಿತ್ಸಾಲಯ ಮೊದಲಾಗಿ ಹಲವು ಸೇವಾ ಚಟುವಟಿಕೆಗಳಿಗೆ ಶಕ್ತಿ ತುಂಬಿದರು. ಎಲ್ಲಾ ಸ್ತರದ ಚುನಾವಣೆಗಳಲ್ಲಿ ಗೆಲುವು ರೂಪಿಸಿದರು. ಎಲ್ಲರಿಗೂ ಆರಾಧಕರಾದರು. ಹತ್ತಿರವಾದರು. ಗೊತ್ತಿಲ್ಲದಂತೆ ನಮ್ಮಗಳ ಬದುಕಿನಲ್ಲಿ ಆವರಿಸಿದರು. ನಮ್ಮನ್ನು ಬೆಳೆಸಿದರು.
ಹೇಳಿ ಮುಗಿಸಲಾಗದ ವ್ಯಕ್ತಿತ್ವ ಅವರದ್ದು. ಬೆಲ್ಲದ ಸವಿ ಚಪ್ಪರಿಸಿದವರಿಗೆ ಗೊತ್ತು ಹೇಗೋ, ಹೀಗೆ ಮೇಷ್ಟ್ರ ಸಹವಾಸ ಸವಿದವರಿಗೆ ಗೊತ್ತು. ಇಂತಹ ಅದ್ಭುತ ಅಪರೂಪದ ಸಂಘಟಕರ ನೆನಪುಗಳನ್ನು ಚಿರವಾಗಿಸಲು ಅವರೊಂದಿಗೆ ಒಡನಾಟವಿದ್ದ ಹಲವರು ಬರೆದ ಲೇಖನಗಳನ್ನು ಒಳಗೊಂಡ ಸಂಸ್ಕರಣ ಗ್ರಂಥದ ಬಿಡುಗಡೆ, ಇದೇ ಶನಿವಾರ 17ರ ಸಂಜೆ 5:30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಆರ್ಎಸ್ಎಸ್ ನ ರಾಷ್ಟ್ರೀಯ ಸರ ಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ, ಕೃಷ್ಣಸ್ಮೃತಿ’ ಎಂಬ ಸಂಸ್ಮರಣ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣ, ಭ.ಮ. ಶ್ರೀಕಂಠ, ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಡಿ.ಎಚ್. ಶಂಕಮೂರ್ತಿ, ಪಿ.ವಿ. ಕೃಷ್ಣಭಟ್, ಪಟ್ಟಾಭಿರಾಮ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಶ್ರೀ ಹಿರಿಯೂರು ಕೃಷ್ಣಮೂರ್ತಿಗಳ ಪತ್ನಿ ಶ್ರೀಮತಿ ಉಮಾ ಅವರು ಪಾಲ್ಗೊಳ್ಳಲಿದ್ದಾರೆ.
ಪರಿವಾರದ ಎಲ್ಲಾ ಸಾಮಾಜಿಕ ಕಾರ್ಯಕರ್ತರು,
ಆಸಕ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದೆ.
-🖋️ ಶ್ರೀನಾಥ್ ನಗರಗದ್ದೆ