
ಶಿವಮೊಗ್ಗ: ಮನುಷ್ಯನ ದುಃಖಕ್ಕೆ ಕಾರಣವೇನು ಎಂಬುದನ್ನು ಅರಿಯಲು ಅರಮನೆ ತೊರೆದವ ಬುದ್ಧನಾದ. ಇದಕ್ಕೆ ಕಾರಣ ಹುಡುಕುವ ಸಲುವಾಗಿ 12ನೇ ಶತಮಾನದಲ್ಲಿ ಶರಣರು ಅನುಭವ ಮಂಟಪ ಆರಂಭಿಸಿದರು. ಭಿನ್ನ ಕಲ್ಪನೆಯ ಅನುಭವ ಮಂಟಪ ಜನರಿಗೆ ಜ್ಞಾನ ಹಂಚುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಹಾಗೂ ಶಿವಗಂಗಾ ಯೋಗ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಸಂಜೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ “ಬಾಳ ಬೆಳಕು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಯಸಿದ್ದೆಲ್ಲವೂ ಸಿಗಬೇಕು. ಹಾಗೆ ಸಿಕ್ಕಿದ್ದು ಎಂದಿಗೂ ತನ್ನಿಂದ ದೂರಾಗಬಾರದು ಎಂಬುದು ಮನುಷ್ಯನ ಆಸೆ. ಇವೇ ಕಾರಣದಿಂದಾಗಿಯೇ ಜಗತ್ತಿನಲ್ಲಿ ಯುದ್ಧಗಳು ಸಂಭವಿಸಿವೆ. ಇಂದಿನ ಎಲ್ಲ ಸ್ಪರ್ಧೆಗಳಿಗೂ ಇದೇ ಕಾರಣವಾಗಿದೆ ಎಂದರು.
ಮನುಷ್ಯನ ದುಃಖ, ನೋವುಗಳಿಗೆ ಅಜ್ಞಾನವೇ ಕಾರಣ. ಸಾವಿನ ನಂತರ ನಮ್ಮ ಆಸ್ತಿಯಲ್ಲಿ ಅನೇಕರು ಪಾಲು ಕೇಳಬಹುದು. ಆದರೆ ನಮ್ಮ ಪಾಪದ ಪಾಲನ್ನು ಹಂಚಿಕೊಳ್ಳಲು ಯಾರೂ ಮುಂದೆ ಬರುವುದಿಲ್ಲ. ಅದೇ ರೀತಿ ನಮ್ಮ ಸಂತೋಷದಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ಆದರೆ ದುಃಖವನ್ನು ಹಂಚಿಕೊಳ್ಳುವವರು ಯಾರೂ ಇಲ್ಲ ಎಂಬ ಸಂಗತಿ ನಮಗೆ ತಿಳಿದಿರಬೇಕು ಎಂದು ಹೇಳಿದರು.ದುಃಖದಿಂದ ಮನುಷ್ಯ ಮುಕ್ತನಾಗಬೇಕು. ಅನೇಕ ಸಂಗತಿಗಳನ್ನು ಮನುಷ್ಯ ಮರೆಯಲು ಬಯಸುತ್ತಾನೆ. ಆದರೂ ಅವು ಮನುಷ್ಯನ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತವೆ. ಕೆಲವು ಮಾತುಗಳನ್ನು ಮರೆಯವುದು ಅಷ್ಟು ಸುಲಭವಲ್ಲ. ಮನುಷ್ಯನ ಮನಸ್ಸು ಅಂತರಂಗದಲ್ಲಿ ನಿ೦ತಾದ ದುಃಖದಿಂದ ಮುಕ್ತಿ ಸಿಗುತ್ತದೆ. ಮನಸ್ಸಿಗೆ ಒಳ್ಳೆಯದು ನೀಡಿದಾಗ ದುಃಖ ದೂರಾಗುತ್ತದೆ. ಎಲ್ಲವನ್ನೂ ತ್ಯಜಿಸಿದ ಅಕ್ಕಮಹಾದೇವಿ ತನಗಿಂತ ಪರಮಸುಖಿ ಯಾರೂ ಇಲ್ಲ ಎಂದು ಹೇಳಿಕೊಂಡಿದ್ದಳು. ಆದರೆ ಎಲ್ಲವನ್ನೂ ಹೊಂದಿರುವ ನಾವು ದುಃಖಿಗಳಾಗಿದ್ದೇವೆ ಎಂದರು.
ತುಂಬಿ ತುಳುಕಿದ ಕುವೆಂಪು ರಂಗ ಮಂದಿರ
ಕೊಪ್ಪಳ ಶ್ರೀಗಳ ಮಾತು ಕೇಳಲು ಜನ ಕಿಕ್ಕಿರಿದು ಸೇರಿದ್ದರು. ಕುರ್ಚಿಗಳನ್ನು ಸಭಾಂಗಣದ ಸುತ್ತಲಿನ ಕಾರಿಡಾರ್ನಲ್ಲಿ ಹಾಕಲಾಗಿತ್ತು. ವೇದಿಕೆ ಮೇಲಿನ ಖಾಲಿ ಜಾಗದಲ್ಲೂ ಜನರು ಕುಳಿತುಕೊಳ್ಳಲು ಅವಕಾಶ ನೀಡಲಾಗಿತ್ತು. ಹಲವು ಮಂದಿ ನಿಂತುಕೊಂಡೇ ಉಪನ್ಯಾಸ ಆಲಿಸಿದರು. ಬಹಳ ದಿನಗಳ ಬಳಿಕ ಕುವೆಂಪು ರಂಗಮಂದಿರ ಜನರಿಂದ ತುಂಬಿ ತುಳುಕಿತು.
ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಶಿವಂಗಂಗಾ ಯೋಗ ಕೇಂದ್ರದ ಯೋಗಗುರು ರುದ್ರಾರಾಧ್ಯ, ಪ್ರಮುಖರಾದ ಉಮೇಶ್ ಆರಾಧ್ಯ ಮೊದಲಾದವರಿದ್ದರು.
ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಈ ಕಾರ್ಯಕ್ರಮದ ಅದ್ಭುತ ಮಾತನ್ನು ಕೇಳಲು, ವಿಡಿಯೋ ನೋಡಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ https://youtu.be/RdFqH1FCTHY?si=Pp0GePsx32CSScXT



