
ಶಿವಮೊಗ್ಗ : ಕರ್ನಾಟಕದ ದಕ್ಷಿಣ ಭಾಗ, ವಿಶೇಷವಾಗಿ ಶಿವಮೊಗ್ಗ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಹಿರಿಯೂರು ಕೃಷ್ಣಮೂರ್ತಿಗಳ ಸಂಸ್ಮರಣೆಯ ಗ್ರಂಥ ಕೃಷ್ಣಸ್ಮೃತಿ ಮೇ 17ರ ಶನಿವಾರ ಸಂಜೆ 05.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಹಿರಿಯೂರು ಕೃಷ್ಣಮೂರ್ತಿಗಳ ಸಂಸ್ಕರಣಾ ಸಮಿತಿ
ವತಿಯಿಂದ ಆಯೋಜನಗೊಂಡಿರುವ
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಈ ಕೃತಿಯನ್ನು ಲೋಕಾರ್ಪಣೆ ಗೊಳಿಸಿ, ಹಿರಿಯೂರು ಕೃಷ್ಣಮೂರ್ತಿಗಳನ್ನು ಸ್ಮರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಪ್ರಚಾರಕರಾದ ಸು. ರಾಮಣ್ಣ ಜೇಷ್ಟ ಕಾರ್ಯಕರ್ತ ಭ. ಮ. ಶ್ರೀಕಂಠ, ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ಒರಿಸ್ಸಾ ಕೇಂದ್ರೀಯ ವಿದ್ಯಾಲಯದ ಕುಲಾಧಿಪತಿಗಳಾದ ಪಿ.ವಿ.ಕೃಷ್ಣಭಟ್, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ, ಸಂಘದ ಪ್ರಾಂತ ಸಹ ಕಾರ್ಯವಾಹ ಟಿ. ಪಟ್ಟಾಭಿರಾಮು ಪಾಲ್ಗೊಳ್ಳಲಿದ್ದಾರೆ. ಹಿರಿಯೂರು ಕೃಷ್ಣಮೂರ್ತಿಗಳ ಧರ್ಮಪತ್ನಿ ಉಮಾ ಹಿರಿಯೂರು ಕೃಷ್ಣಮೂರ್ತಿ ಉಪಸ್ಥಿತರಿರಲಿದ್ದಾರೆ.
ಪರಿಚಯ :
ಹಿರಿಯೂರು ಕೃಷ್ಣಮೂರ್ತಿಗಳು ಮೂಲತಃ ಪ್ರಾಧ್ಯಾಪಕರಾಗಿದ್ದರೂ, ತಮ್ಮ ವೃತ್ತಿಗೆ ಕಿಂಚಿತ್ತೂ ಧಕ್ಕೆ ಭಾರದಂತೆ ಕಾರ್ಯನಿರ್ವಹಿಸಿ, ಎಲೆಯ ಮರೆಯ ಕಾಯಿಯಾಗಿ ಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ಅಗ್ರಗಣ್ಯರು, ಸ್ವತಃ ಪ್ರಚಾರದಿಂದ ದೂರವಾಗಿ, ಸಂಘದ ಪ್ರಚಾರವನ್ನು ಮಾಡಿ, ಇಂದು ಮುಂಚೂಣಿ ನಾಯಕರಾಗಿರುವ ಅನೇಕರನ್ನು ಸ್ವಯಂ ಸೇವಕರನ್ನಾಗಿಸಿ, ಸಂಸ್ಕಾರ ನೀಡಿದವರು.
ಅವರು ಬೆಳೆಸಿರುವ ನೂರಾರು ಕಾರ್ಯಕರ್ತರ ಪೈಕಿ ಹೆಸರಿಸುವುದಾದರೆ, ಬಿ.ಎಸ್. ಯಡಿಯೂರಪ್ಪ ಕೆ. ಎಸ್. ಈಶ್ವರಪ್ಪ, ಆಯನೂರು ಮಂಜುನಾಥ್, ಡಿ. ಹೆಚ್. ಶಂಕರಮೂರ್ತಿ, ಎಂ. ಆನಂದರಾವ್, ಆರ್.ಕೆ. ಸಿದ್ದರಾಮಣ್ಣ ಎಂ. ಬಿ. ಭಾನುಪ್ರಕಾಶ್, ಎಸ್. ಎನ್. ಚನ್ನಬಸಪ್ಪ, ಗಿರೀಶ್ ಪಟೇಲ್, ಎ. ಜೆ. ರಾಮಚಂದ್ರ, ಗೋಪಾಲಕೃಷ್ಣ ಭಾಗವತ್, ಮೈಲಾರಿ ಸೇರಿದಂತೆ ಅನೇಕಾನೇಕ ಸ್ವಯಂ ಸೇವಕರನ್ನು ಬೆಳೆಸಿದವರು.
ಬಹಳ ಮುಖ್ಯವಾಗಿ, ಸಂಘದ ಕಾರ್ಯಾಲಯ ಮಧುಕೃಪ, ಮಾಧವ ನೆಲೆ, ಉಚಿತ ಕೇಶವ ಚಿಕಿತ್ಸಾಲಯಗಳ ಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಇವರು, ಶ್ರೀಗಂಧದಂತಹ ಸಂಸ್ಥೆಗಳ ಬೆನ್ನೆಲುಬಾಗಿದ್ದವರು. ಎಲ್ಲ ಸ್ಥರದ ಚುನಾವಣೆಗಳಲ್ಲಿ ಹಿನ್ನೆಲೆಯಲ್ಲಿ ನಿಂತು ಗೆಲುವಿಗೆ ಶ್ರಮಿಸಿದವರು. ಗೆದ್ದಾಗ ಸಂಭ್ರಮಿಸಿದವರು. ಅಜಾತಶತೃವಾಗಿ ಎಲ್ಲರೊಂದಿಗೆ ಬೆರೆತು, ನೋವು-ನಲಿವುಗಳಿಗೆ ಸ್ಪಂದಿಸುತ್ತಿದ್ದ ಹಿರಿಯೂರರ ಸ್ಮರಣೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಬಹುದು. ಪ್ರಸ್ತುತದ ಸಂದರ್ಭದಲ್ಲಿ ಅವರಂತಹ ವ್ಯಕ್ತಿತ್ವದ ಅಗತ್ಯವಿತ್ತು. ಅವರಿಲ್ಲ ಎಂಬ ಕೊರಗು ಇದ್ದೇ ಇದೆ. ಆ ಜಾಗವನ್ನು ಅವರೊಬ್ಬರೇ ತುಂಬ ಬಲ್ಲರು ಎಂಬುದು ಮಾತ್ರ ಸತ್ಯ.
ಕೃಷ್ಣಮೂರ್ತಿಗಳನ್ನು ಕಂಡು ಒಡನಾಡಿದ ಸುಮಾರು 70 ಜನರು ಲೇಖನಗಳನ್ನು ಬರೆದಿದ್ದಾರೆ. ಗ್ರಂಥದ ಬೆಲೆ 250 ರೂ.ಗಳಾಗಿದ್ದು, ಬಿಡುಗಡೆಯ ದಿನ 150 ರೂ.ಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.
ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಎ.ಜೆ. ರಾಮಚಂದ್ರ, ಆ.ಕೆ. ಸಿದ್ಧರಾಮಣ್ಣ, ಗಿರೀಶ್ ಪಟೇಲ್, ನಟರಾಜ್ ಭಾಗವತ್, ಸಚ್ಚಿದಾನಂದ, ಶ್ರೀನಾಥ್ ನಗರಗದ್ದೆ, ವಿಜಯೇಂದ್ರ ಸೂಳಿಕೆರೆ, ದೀನದಯಾಳ್ ಮುಂತಾದವರಿದ್ದರು.
